ದಿಲ್ ತೋ ಪಾಗಲ್ ಹೇ (ಅನುವಾದ: ಹೃದಯ ಹುಚ್ಚಾಗಿದೆ) ೧೯೯೭ರ ಒಂದು ಹಿಂದಿ ಸಂಗೀತ ಪ್ರಣಯಪ್ರಧಾನ ಚಲನಚಿತ್ರವಾಗಿದೆ. ಇದನ್ನು ಯಶ್ ಚೋಪ್ರಾ ನಿರ್ದೇಶಿಸಿದ್ದಾರೆ. ಈ ಚಿತ್ರವು ಒಂದು ಸಂಗೀತ ತಂಡದ ಸದಸ್ಯರ ಪ್ರೇಮ ಜೀವನಗಳನ್ನು ಅನುಸರಿಸುತ್ತದೆ. ಇದರಲ್ಲಿ ಮಾಧುರಿ ದೀಕ್ಷಿತ್ ಮತ್ತು ಕರಿಶ್ಮಾ ಕಪೂರ್‌ರಿಂದ ಅಭಿನಯಿಸಲ್ಪಟ್ಟ ಇಬ್ಬರು ನರ್ತಕಿಯರು ಶಾರುಖ್ ಖಾನ್‍ರಿಂದ ಅಭಿನಯಿಸಲ್ಪಟ್ಟ ಒಬ್ಬ ನೃತ್ಯ ನಿರ್ದೇಶಕನ ಪ್ರೀತಿಗಾಗಿ ಸ್ಪರ್ಧಿಸುತ್ತಾರೆ. ದೀಕ್ಷಿತ್‍ರ ಪಾತ್ರದ ಬಾಲ್ಯದ ಗೆಳೆಯನಾಗಿ ವಿಶೇಷ ಪಾತ್ರದಲ್ಲಿ ಅಕ್ಷಯ್ ಕುಮಾರ್ ನಟಿಸಿದ್ದಾರೆ. ಧ್ವನಿವಾಹಿನಿಯನ್ನು ಉತ್ತಮ್ ಸಿಂಗ್ ಸಂಯೋಜಿಸಿದ್ದರು ಮತ್ತು ಹಾಡುಗಳಿಗೆ ಸಾಹಿತ್ಯವನ್ನು ಆನಂದ ಬಕ್ಷಿ ಬರೆದಿದ್ದರು. ₹90 ದಶಲಕ್ಷದ ಬಂಡವಾಳದಲ್ಲಿ ನಿರ್ಮಾಣವಾದ ದಿಲ್ ತೋ ಪಾಗಲ್ ಹೇ ವಿಶ್ವಾದ್ಯಂತ ₹598 ದಶಲಕ್ಷಕ್ಕಿಂತ ಹೆಚ್ಚು ಹಣಗಳಿಸಿತು. ಈ ಚಿತ್ರವು ವಿಮರ್ಶಕರಿಂದ ಬಹುತೇಕವಾಗಿ ಸಕಾರಾತ್ಮಕ ವಿಮರ್ಶೆಗಳನ್ನು ಪಡೆಯಿತು ಮತ್ತು ಚೋಪ್ರಾರ ನಿರ್ದೇಶನ, ಕಥೆ, ಧ್ವನಿವಾಹಿನಿ ಮತ್ತು ಖಾನ್, ದೀಕ್ಷಿತ್, ಕಪೂರ್ ಹಾಗೂ ಕುಮಾರ್‌ರ ಅಭಿನಯಗಳನ್ನು ಪ್ರಶಂಸಿಸಲಾಯಿತು. ದಿಲ್ ತೋ ಪಾಗಲ್ ಹೇ ಚಿತ್ರವು ಹಲವು ಪ್ರಶಸ್ತಿಗಳನ್ನು ಗೆದ್ದಿತು. ೪೬ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ ಈ ಚಿತ್ರವು ಕಪೂರ್‌ರಿಗೆ ಅತ್ಯುತ್ತಮ ಪೋಷಕ ನಟಿಯ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸೇರಿದಂತೆ ಮೂರು ಪ್ರಶಸ್ತಿಗಳನ್ನು ಗೆದ್ದಿತು. ಜೊತೆಗೆ, ೪೩ನೇ ಫಿಲ್ಮ್‌ಫೇರ್ ಪ್ರಶಸ್ತಿ ಸಮಾರಂಭದಲ್ಲಿ ಈ ಚಿತ್ರವು ಹನ್ನೊಂದು ಪ್ರಶಸ್ತಿಗಳಿಗೆ ನಾಮನಿರ್ದೇಶನಗೊಂಡು ಅತ್ಯುತ್ತಮ ಚಲನಚಿತ್ರ, ಖಾನ್‍ರಿಗೆ ಅತ್ಯುತ್ತಮ ನಟ, ದೀಕ್ಷಿತ್‍ರಿಗೆ ಅತ್ಯುತ್ತಮ ನಟಿ, ಕಪೂರ್‌ರಿಗೆ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ಸೇರಿದಂತೆ ಎಂಟು ಪ್ರಶಸ್ತಿಗಳನ್ನು ಗೆದ್ದಿತು. == ಕಥಾವಸ್ತು == ರಾಹುಲ್ (ಶಾರುಖ್ ಖಾನ್) ಮತ್ತು ನಿಶಾ (ಕರಿಶ್ಮಾ ಕಪೂರ್) ನೃತ್ಯಾಧಾರಿತ ಸಂಗೀತ ನಾಟಕಗಳನ್ನು ಪ್ರದರ್ಶಿಸುವ ಒಂದು ಬೃಹತ್ ನೃತ್ಯ ತಂಡದ ಸದಸ್ಯರಾಗಿರುತ್ತಾರೆ. ಅವರು ಬಹಳ ಒಳ್ಳೆ ಗೆಳೆಯರಾಗಿರುತ್ತಾರೆ. ಆದರೆ ನಿಶಾ ರಾಹುಲ್‍ನನ್ನು ರಹಸ್ಯವಾಗಿ ಪ್ರೀತಿಸುತ್ತಿರುತ್ತಾಳೆ. ಮಾಯಾ ಎಂಬ ಹೆಸರಿನ ಸಂಗೀತ ನಾಟಕವನ್ನು ನಿರ್ದೇಶಿಸುವ ತನ್ನ ಬಯಕೆಯನ್ನು ರಾಹುಲ್ ಘೋಷಿಸುತ್ತಾನೆ. ನಿಶಾ ಸೇರಿದಂತೆ ತಂಡದ ಸದಸ್ಯರು ಶೀರ್ಷಿಕೆ ಪಾತ್ರಳಾದ "ಮಾಯಾ" ಬಗ್ಗೆ ತಮ್ಮದೇ ಸಂದೇಹಗಳನ್ನು ಹೊಂದಿರುತ್ತಾರೆ. ಇವಳು ನಿಜವಾದ ಪ್ರೀತಿಯನ್ನು ನಂಬಿರುವವಳು ಮತ್ತು ಖಂಡಿತವಾಗಿ ಬಂದು ತನ್ನನ್ನು ಕರೆದೊಯ್ಯುವ ತನ್ನ ಮೋಹಕ ರಾಜಕುಮಾರನಿಗಾಗಿ ಕಾಯುತ್ತಿರುವಳು ಎಂದು ರಾಹುಲ್ ವರ್ಣಿಸುತ್ತಾನೆ. ಈ ನಡುವೆ, ಪೂಜಾಳನ್ನು (ಮಾಧುರಿ ದೀಕ್ಷಿತ್) ಪರಿಚಯಿಸಲಾಗುತ್ತದೆ. ಇವಳು ಅಧ್ಭುತ ನರ್ತಕಿಯಾಗಿದ್ದು, ಜೊತೆಗೆ ಶಾಸ್ತ್ರೀಯವಾಗಿ ತರಬೇತಿ ಪಡೆದಿರುತ್ತಾಳೆ ಮತ್ತು ನೃತ್ಯದ ಬಗ್ಗೆ ತೀವ್ರಾಸಕ್ತಿಯನ್ನು ಹೊಂದಿರುತ್ತಾಳೆ. ಸಣ್ಣ ವಯಸ್ಸಿನಲ್ಲಿ ಅನಾಥಳಾದ ಇವಳನ್ನು ತನ್ನ ಹೆತ್ತವರ ಹತ್ತಿರದ ಸ್ನೇಹಿತರು ಬೆಳೆಸಿರುತ್ತಾರೆ. ಪೂಜಾ ಮತ್ತು ರಾಹುಲ್ ಅನೇಕ ಬಾರಿ ಒಬ್ಬರನ್ನೊಬ್ಬರು ಭೇಟಿಯಾಗಿರುವುದು ತಪ್ಪಿರುತ್ತದೆ ಆದರೆ ಪದೆಪದೆ ಒಬ್ಬರಿಗೊಬ್ಬರು ಎದುರಾಗಿರುತ್ತಾರೆ. ಈ ಪ್ರತಿಯೊಂದು ಸಂದರ್ಭವು ಹಿನ್ನೆಲೆಯಲ್ಲಿ ಒಂದು ಸ್ವರವು ನುಡಿಯುತ್ತಿರುವುದರಿಂದ ಗುರುತಿಸಲ್ಪಟ್ಟಿರುತ್ತದೆ ಮತ್ತು ಇದು ಪೂಜಾಳಲ್ಲಿ ದಾಖಲಿತಾವಾಗುತ್ತದೆ. ನಾಟಕದ ಪೂರ್ವಭ್ಯಾಸದ ವೇಳೆ ನಿಶಾಳ ಕಾಲಿಗೆ ಗಾಯವಾಗಿ ವೈದ್ಯರು ಅವಳು ಕೆಲವು ತಿಂಗಳು ಕುಣಿಯಲು ಆಗುವುದಿಲ್ಲ ಎಂದು ಹೇಳುತ್ತಾರೆ. ನಾಟಕದಲ್ಲಿ ಮುಖ್ಯ ಪಾತ್ರವನ್ನು ವಹಿಸಲು ರಾಹುಲ್‍ಗೆ ಹೊಸ ಮಹಿಳೆಯೊಬ್ಬಳು ಬೇಕಾಗಿರುತ್ತಾಳೆ. ಒಂದು ದಿನ ಅವನು ಪೂಜಾ ನರ್ತಿಸುತ್ತಿರುವುದನ್ನು ಕಂಡು ಅವಳು ಪಾತ್ರಕ್ಕೆ ಯಥೋಚಿತಳು ಎಂದು ನಂಬುತ್ತಾನೆ. ಅವಳು ತಮ್ಮ ಪೂರ್ವಭ್ಯಾಸಗಳಿಗೆ ಬರಬೇಕೆಂದು ಬೇಡಿಕೊಂಡಾಗ ಅವಳು ಒಪ್ಪುತ್ತಾಳೆ. ರಾಹುಲ್ ಮತ್ತು ಪೂಜಾ ಹತ್ತಿರದ ಸ್ನೇಹಿತರಾಗುತ್ತಾರೆ. ಅವಳ ಸಾಕು ಕುಟುಂಬವು ಅವಳನ್ನು ಅತಿಯಾಗಿ ಪ್ರೀತಿಸುತ್ತಿರುತ್ತದೆ. ಶೀಘ್ರವೇ ಪೂಜಾಳನ್ನು ಅವಳ ಬಾಲ್ಯದ ಅತ್ಯುತ್ತಮ ಗೆಳೆಯ ಮತ್ತು ಪೋಷಕನ ಮಗನಾದ ಅಜಯ್ (ಅಕ್ಷಯ್ ಕುಮಾರ್) ಜರ್ಮನಿಗೆ ಕರೆದೊಯ್ಯುತ್ತಾನೆ. ಅವನು ಅನೇಕ ತಿಂಗಳುಗಳಿಂದ ಲಂಡನ್‍ನಲ್ಲಿ ಇದ್ದಿರುತ್ತಾನೆ. ಇಂಗ್ಲೆಂಡ್‍ಗೆ ಹಾರಲು ಇನ್ನೇನು ಹೊರಡುವುದರಲ್ಲಿ, ಅವನು ಪೂಜಾಳ ಎದುರು ಮದುವೆ ಪ್ರಸ್ತಾಪ ಮಾಡುತ್ತಾನೆ. ಸಂದಿಗ್ಧ ಸ್ಥಿತಿಯಲ್ಲಿ ಸಿಲುಕುವ ಅವಳು ಅದನ್ನು ಒಪ್ಪಿಕೊಳ್ಳುತ್ತಾಳೆ. ಶೀಘ್ರವೇ ನಿಶಾ ಆಸ್ಪತ್ರೆಯಿಂದ ಹಿಂದಿರುಗಿ ತನ್ನನ್ನು ಬದಲಿಸಲಾಗಿದೆಯೆಂದು ತಿಳಿದು ನಿರಾಶಳಾಗುತ್ತಾಳೆ. ರಾಹುಲ್ ಪೂಜಾಳನ್ನು ಪ್ರೀತಿಸುತ್ತಾನೆ ಎಂದು ತಿಳಿದ ಮೇಲೆ, ಅವಳು ಪೂಜಾ ಬಗ್ಗೆ ಬಹಳ ಅಸೂಯೆ ಪಡುತ್ತಾಳೆ. ರಾಹುಲ್ ತನ್ನ ಪ್ರೀತಿಯನ್ನು ಪ್ರತಿಯಾಗಿ ತೋರುವುದಿಲ್ಲವೆಂದು ತಿಳಿದು ಅವಳು ಲಂಡನ್‍ಗೆ ಹೊರಡಲು ನಿರ್ಧರಿಸುತ್ತಾಳೆ. ಪೂರ್ವಭ್ಯಾಸಗಳಾದ್ಯಂತ, ರಾಹುಲ್ ಮತ್ತು ಪೂಜಾ ತಾವು ಒಬ್ಬರನ್ನೊಬ್ಬರು ಪ್ರೀತಿಸುತ್ತಿರುವುದನ್ನು ಕಂಡುಕೊಳ್ಳುತ್ತಾರೆ. ಒಂದು ದಿನ ರಾಹುಲ್ ಪೂಜಾಳನ್ನು ಮನೆಗೆ ಬಿಟ್ಟಾಗ, ಅವನು ತನ್ನ ಸ್ವರವನ್ನು ನುಡಿಸಲು ಆರಂಭಿಸುತ್ತಾನೆ. ತಾನು ಅಷ್ಟು ಸಲ ಕೇಳಿದ ಸ್ವರವನ್ನು ನುಡಿಸುವ ವ್ಯಕ್ತಿಯನ್ನು ಪ್ರೀತಿಸುತ್ತಿದ್ದೇನೆ ಎಂದು ಪೂಜಾಗೆ ಅರಿವಾಗುತ್ತದೆ. ಮರುದಿನ, ಇಬ್ಬರೂ ಪೂಜಾಳ ಹಳೆ ನೃತ್ಯ ಶಿಕ್ಷಕಿಯನ್ನು ಭೇಟಿಯಾಗಲು ಹೋಗುತ್ತಾರೆ. ಪೂಜಾ ಅವರನ್ನು ತಾಯಿ (ಅರುಣಾ ಇರಾನಿ) ಎಂದು ಸಂಬೋಧಿಸುತ್ತಿರುತ್ತಾಳೆ. ಇಬ್ಬರೂ ಸ್ಪಷ್ಟವಾಗಿ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದಾರೆಂದು ಅವರಿಗೆ ಗೊತ್ತಾಗುತ್ತದೆ. ನೃತ್ಯ ತಂಡದ ಇಬ್ಬರು ಸದಸ್ಯರ ವಿವಾಹದಲ್ಲಿ, ರಾಹುಲ್ ಮತ್ತು ಪೂಜಾ ಒಂದು ಅನ್ಯೋನ್ಯ ಕ್ಷಣವನ್ನು ಹಂಚಿಕೊಳ್ಳುತ್ತಾರೆ. ಆದರೆ ತಮ್ಮ ಪ್ರೀತಿಯನ್ನು ಸಂಪೂರ್ಣವಾಗಿ ಹೇಗೆ ವ್ಯಕ್ತಪಡಿಸಬೇಕೆಂದು ಅವರಿಗೆ ಗೊತ್ತಗುವುದಿಲ್ಲ. ಪ್ರಥಮ ಪ್ರದರ್ಶನದ ಕೆಲವು ದಿನ ಮುಂಚೆ, ಅಜಯ್ ಪೂರ್ವಭ್ಯಾಸದ ಕೋಣೆಗೆ ಆಗಮಿಸಿ ಪೂಜಾಳನ್ನು ಆಶ್ಚರ್ಯಗೊಳಿಸಿ ಎಲ್ಲರಿಗೂ ತಾನು ಅವಳ ನಿಶ್ಚಿತ ವರನೆಂದು ಹೇಳುತ್ತಾನೆ. ರಾಹುಲ್‍ನ ಹೃದಯ ಒಡೆಯುತ್ತದೆ ಆದರೆ ಅದನ್ನು ತೋರಿಸದಿರಲು ಪ್ರಯತ್ನಿಸುತ್ತಾನೆ. ಮರಳಿ ಬಂದಿರುವ ನಿಶಾ ರಾಹುಲ್‍ನ ವಿನಾಶವನ್ನು ಗಮನಿಸುತ್ತಾಳೆ ಮತ್ತು ಅವನು ತನ್ನನ್ನು ಮರಳಿ ಪ್ರೀತಿಸದಿದ್ದಾಗ ತಾನು ಕೂಡ ಹೇಗೆ ಧ್ವಂಸಗೊಂಡಿದ್ದೆ ಎಂದು ವಿವರಿಸುತ್ತಾಳೆ. ರಾಹುಲ್ ತನ್ನ ಸಾಮಾನ್ಯ ಶೈಲಿಯಾದ ಯಾವಾಗಲೂ ಸಂತೋಷದ ಮುಕ್ತಾಯವನ್ನು ನೀಡುವ ಬದಲು, ತನ್ನ ಅಳಲನ್ನು ಪ್ರತಿಬಿಂಬಿಸಲು ನಾಟಕದ ಅಂತ್ಯವನ್ನು ಪರಿಷ್ಕರಿಸುತ್ತಾನೆ. ಪ್ರಥಮ ಪ್ರದರ್ಶನದ ರಾತ್ರಿಯಂದು, ರಾಹುಲ್ ಮತ್ತು ಪೂಜಾಳ ಪಾತ್ರಗಳನ್ನು ರಂಗಸ್ಥಳದ ಮೇಲೆ ಇನ್ನೇನು ದೂರವಾಗುವ ವೇಳೆ, ತನ್ನ ಮದುವೆ ಪ್ರಸ್ತಾಪದ ಮುನ್ನ ಪೂಜಾ ತನಗೆ ಕಳಿಸಬೇಕೆಂದಿದ್ದ ಮುದ್ರಿತ ಟೇಪನ್ನು ಅಜಯ್ ಚಾಲನೆಗೊಳಿಸುತ್ತಾನೆ. ಅದರಲ್ಲಿ ಅವಳು ರಾಹುಲ್ ಬಗ್ಗೆ ತನ್ನ ಅನಿಸಿಕೆಗಳನ್ನು ವರ್ಣಿಸಿರುತ್ತಾಳೆ. ಅವಳು ಮತ್ತು ರಾಹುಲ್ ಒಟ್ಟಾಗಿರಬೇಕೆಂಬ ಉದ್ದೇಶ ಹೊಂದಿದ್ದೇನೆ ಎಂದು ಅಜಯ್ ಪೂಜಾಗೆ ಪರೋಕ್ಷವಾಗಿ ಹೇಳುತ್ತಾನೆ. ತಾನು ರಾಹುಲ್‍ನನ್ನು ನಿಜವಾಗಿಯೂ ಪ್ರೀತಿಸುತ್ತೇನೆಂದು ಪೂಜಾಗೆ ಈಗ ಅರಿವಾಗುತ್ತದೆ. ಇಬ್ಬರೂ ರಂಗಸ್ಥಳದ ಮೇಲೆ ತಮ್ಮ ಪ್ರೀತಿಯನ್ನು ಹೇಳಿಕೊಂಡಾಗ ಪ್ರೇಕ್ಷಕರು ಚಪ್ಪಾಳೆಯಿಂದ ಅನುಮೋದಿಸುತ್ತಾರೆ. ಹೀಗೆ ಮತ್ತೊಮ್ಮೆ ನಾಟಕಕ್ಕೆ ಸಂತೋಷದ ಅಂತ್ಯ ಸಿಗುತ್ತದೆ. ಜೊತೆಗೆ, ನೇಪಥ್ಯದಲ್ಲಿ, ಅಜಯ್ ನಿಶಾಳಿಗೆ ಅವಳ ಮದುವೆಯಾಗಿದೆಯೇ ಎಂದು ಕೇಳುತ್ತಾನೆ (ಅಂದರೆ ಅವನು ಅವಳಲ್ಲಿ ಆಸಕ್ತನಾಗುತ್ತಿರುವುದು ಸೂಚಿತವಾಗುತ್ತದೆ). == ಪಾತ್ರವರ್ಗ == ರಾಹುಲ್ ಪಾತ್ರದಲ್ಲಿ ಶಾರುಖ್ ಖಾನ್ ಪೂಜಾ ಪಾತ್ರದಲ್ಲಿ ಮಾಧುರಿ ದೀಕ್ಷಿತ್ ನಿಶಾ ಪಾತ್ರದಲ್ಲಿ ಕರಿಶ್ಮಾ ಕಪೂರ್ ಅಜಯ್ ಪಾತ್ರದಲ್ಲಿ ಅಕ್ಷಯ್ ಕುಮಾರ್ ಶಾಂತಿ ಪಾತ್ರದಲ್ಲಿ ಫ಼ರೀದಾ ಜಲಾಲ್ ಶ್ರೀಕಾಂತ್ ಪಾತ್ರದಲ್ಲಿ ದೇವೇನ್ ವರ್ಮಾ ಅನಾಮಿಕಾ ಪಾತ್ರದಲ್ಲಿ ಅರುಣ ಇರಾನಿ == ತಯಾರಿಕೆ == ಈ ಚಿತ್ರಕ್ಕೆ ಮೊದಲು ಬೇರೆ ಶೀರ್ಷಿಕೆಗಳನ್ನು ನೀಡಲಾಗಿತ್ತು. ಆದರೆ ಅಂತಿಮವಾಗಿ ಯಶ್ ಚೋಪ್ರಾ "ದಿಲ್ ತೋ ಪಾಗಲ್ ಹೇ" ಶೀರ್ಷಿಕೆಯನ್ನು ನಿಶ್ಚಿತಗೊಳಿಸಿದರು. ಪಾತ್ರಕ್ಕೆ ಮೊದಲ ಆಯ್ಕೆಯಾಗಿದ್ದ ಕಪೂರ್ ಯೋಜನೆಯನ್ನು ಕೈಗೆತ್ತುಕೊಳ್ಳಲು ಹಿಂಜರಿದಿದ್ದರು. ಈ ಪಾತ್ರವನ್ನು ಮೊದಲು ಬೇರೆ ಇಬ್ಬರು ನಟಿಯರಿಗೆ ನೀಡುವ ಪ್ರಸ್ತಾಪ ಮಾಡಲಾಗಿತ್ತು. ಆದರೆ ಅವರು ಇದನ್ನು ನಿರಾಕರಿಸಿದರು. ಜೂಹಿ ಚಾವ್ಲಾ ಇದರಲ್ಲಿ ಒಬ್ಬರಾಗಿದ್ದರು. ಈ ಪಾತ್ರವನ್ನು ನಟಿ ಊರ್ಮಿಳಾ ಮಾತೋಂಡ್ಕರ್‌ರಿಗೂ ನೀಡಲಾಗಿತ್ತು. ಅವರು ಒಪ್ಪಿಕೊಂಡಿದ್ದರು ಆದರೆ ಒಂದು ದಿನದ ಚಿತ್ರೀಕರಣದ ನಂತರ ಚಿತ್ರವನ್ನು ಬಿಟ್ಟರು. ಆ ಕಾಲದ ಯಾವುದೇ ಪ್ರಮುಖ ನಟಿಯು ಮಾಧುರಿಗೆ ಎರಡನೇ ಮುಖ್ಯ ನಟಿಯ ಪಾತ್ರವಹಿಸುವ ಅಪಾಯವನ್ನು ತೆಗೆದುಕೊಳ್ಳಲು ಸಿದ್ಧರಿರಲಿಲ್ಲ. ಚೋಪ್ರಾ ಕಪೂರ್‌ರ ಬಳಿ ಮತ್ತೊಮ್ಮೆ ಹೋದಾಗ ಅವರು ಸವಾಲು ತೆಗೆದುಕೊಳ್ಳಲು ಒಪ್ಪಿದರು ಮತ್ತು ಅಂತಿಮವಾಗಿ ಅವರಿಗೆ ಪಾತ್ರವನ್ನು ನೀಡಲಾಯಿತು. ಪರದೆ ಮೇಲಿನ ಸಣ್ಣದಾದ ಸಮಯದ ಹೊರತಾಗಿಯೂ ತಾವು ತಮ್ಮ ಪಾತ್ರದಿಂದ ಬಹಳಷ್ಟು ಸಾಧಿಸಬಹುದೆಂದು ಅವರಿಗೆ ಅನಿಸಿತು. ಕಥೆಯನ್ನು ಬರೆಯುವುದರ ಜೊತೆಗೆ, ಚೋಪ್ರಾ ಎಂ ವಕೀಲ್‍ರೊಂದಿಗೆ ಯಶ್ ರಾಜ್ ಫ಼ಿಲ್ಮ್ಸ್ ಲಾಂಛನದಡಿ ಚಿತ್ರವನ್ನು ನಿರ್ಮಿಸಿದರು. ಕಥೆಯನ್ನು ಚೋಪ್ರಾ, ಅವರ ಮಗ ಆದಿತ್ಯ ಮತ್ತು ಅವರ ಹೆಂಡತಿ ಪಮೇಲಾ ಬರೆದರು. ಚಿತ್ರದ ವಸ್ತ್ರಗಳನ್ನು ಮನೀಶ್ ಮಲ್ಹೋತ್ರಾ, ಕರನ್ ಜೋಹರ್ ಮತ್ತು ಸಲ್ಮಾನ್ ಒಟ್ಟಾಗಿ ವಿನ್ಯಾಸಗೊಳಿಸಿದರು. ಮನ್‍ಮೋಹನ್ ಸಿಂಗ್ ಚಿತ್ರದ ಛಾಯಾಗ್ರಾಹಕರಾಗಿದ್ದರು. ಫ಼ಾರಾ ಖಾನ್ ಮತ್ತು ಶ್ಯಾಮಕ್ ದಾವರ್ ನೃತ್ಯ ನಿರ್ದೇಶಕರಾಗಿದ್ದರು. ಇದು ಚಿತ್ರಗಳಲ್ಲಿ ಶಾಹಿದ್ ಕಪೂರ್‌ರ ಮೊದಲ ಭಾಗವಹಿಕೆಗಳಲ್ಲಿ ಒಂದಾಗಿತ್ತು. ಅವರು "ಲೇ ಗಯಿ" ಹಾಡಿನಲ್ಲಿ ಹಿನ್ನೆಲೆ ನರ್ತಕರಾಗಿದ್ದರು. ಮನೀಶ್ ಮಲ್ಹೋತ್ರಾ ಸೃಷ್ಟಿಸಿದ ೫೪ ವಸ್ತ್ರಗಳನ್ನು ತಿರಸ್ಕರಿಸಿ ಅಂತಿಮವಾಗಿ ಚೋಪ್ರಾ ದೀಕ್ಷಿತ್‍ರ ಪಾತ್ರಕ್ಕಾಗಿ ಸಲ್ವಾರ್ ಕಮೀಝ್‌ನ್ನು ಆಯ್ಕೆಮಾಡಿದರು. ಈ ಚಿತ್ರದ ಸ್ವಲ್ಪ ಭಾಗವನ್ನು ಜರ್ಮನಿಯ ಪ್ರವಾಸಿ ಸ್ಥಳಗಳಲ್ಲಿ ಚಿತ್ರೀಕರಿಸಲಾಗಿತ್ತು. ಈ ಚಿತ್ರವನ್ನು ₹90 ದಶಲಕ್ಷದ ಬಂಡವಾಳದಲ್ಲಿ ತಯಾರಿಸಲಾಗಿತ್ತು. == ಧ್ವನಿವಾಹಿನಿ == ದಿಲ್ ತೋ ಪಾಗಲ್ ಹೇ ಚಿತ್ರದ ಧ್ವನಿವಾಹಿನಿಯು ಹತ್ತು ಹಾಡುಗಳನ್ನು ಒಳಗೊಂಡಿತ್ತು. ಚಿತ್ರದ ಹಾಡುಗಳನ್ನು ಉತ್ತಮ್ ಸಿಂಗ್ ಸಂಯೋಜಿಸಿದ್ದರು. ಹಾಡುಗಳಿಗೆ ಸಾಹಿತ್ಯವನ್ನು ಆನಂದ್ ಬಕ್ಷಿ ಬರೆದಿದ್ದರು. ಸಾರ್ವಜನಿಕರು ಸಂಗೀತವನ್ನು ಬಹಳ ಇಷ್ಟಪಟ್ಟರು. ಈ ಧ್ವನಿವಾಹಿನಿ ಸಂಪುಟವು ಆ ವರ್ಷದ ಅತಿ ಹೆಚ್ಚು ಮಾರಾಟವಾದ ಬಾಲಿವುಡ್ ಧ್ವನಿವಾಹಿನಿಯಾಯಿತು, ಮತ್ತು 12.5 ದಶಲಕ್ಷ ಪ್ರತಿಗಳು ಮಾರಾಟವಾದವು. == ಬಿಡುಗಡೆ == === ಬಾಕ್ಸ್ ಆಫ಼ಿಸ್ === ಈ ಚಿತ್ರವು ಭಾರತದಲ್ಲಿ ₹59.82 ಕೋಟಿಯಷ್ಟು ಮತ್ತು ವಿದೇಶದಲ್ಲಿ $3.3 ದಶಲಕ್ಷದಷ್ಟು ಹಣಗಳಿಸಿತು. ವಿಶ್ವಾದ್ಯಂತ ಇದರ ಒಟ್ಟು ಮೊತ್ತ ₹71.86 ಕೋಟಿಯಷ್ಟಾಗಿತ್ತು ಮತ್ತು ಇದರ ಬಂಡವಾಳ ₹9 ಕೋಟಿಯಷ್ಟಾಗಿತ್ತು. ವಿದೇಶದಲ್ಲಿ, ಇದು ೧೯೯೭ರಲ್ಲಿ ಅತಿ ಹೆಚ್ಚು ಹಣಗಳಿಸಿದ ಚಲನಚಿತ್ರವಾಗಿತ್ತು. ದಿಲ್ ತೋ ಪಾಗಲ್ ಹೇ ವಿಶ್ವಾದ್ಯಂತ ೧೯೯೭ರ ಅತಿ ಹೆಚ್ಚು ಹಣಗಳಿಸಿದ ಭಾರತೀಯ ಚಲನಚಿತ್ರವಾಗಿತ್ತು. == ಪ್ರಶಸ್ತಿಗಳು ಮತ್ತು ನಾಮನಿರ್ದೇಶನಗಳು == ೪೫ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಹಿತಕರ ಮನೋರಂಜನೆ ಒದಗಿಸುವ ಅತ್ಯುತ್ತಮ ಜನಪ್ರಿಯ ಚಲನಚಿತ್ರ - ಯಶ್ ಚೋಪ್ರಾ - ಗೆಲುವು ಅತ್ಯುತ್ತಮ ನೃತ್ಯ ನಿರ್ದೇಶಕ - ಶ್ಯಾಮಕ್ ದಾವರ್ - ಗೆಲುವು ಅತ್ಯುತ್ತಮ ಪೋಷಕ ನಟಿ - ಕರಿಶ್ಮಾ ಕಪೂರ್ - ಗೆಲುವು ೪೩ನೇ ಫಿಲ್ಮ್‌ಫೇರ್ ಪ್ರಶಸ್ತಿಗಳು ಅತ್ಯುತ್ತಮ ಚಲನಚಿತ್ರ - ಯಶ್ ಚೋಪ್ರಾ - ಗೆಲುವು ಅತ್ಯುತ್ತಮ ನಿರ್ದೇಶಕ - ಯಶ್ ಚೋಪ್ರಾ - ನಾಮನಿರ್ದೇಶಿತ ಅತ್ಯುತ್ತಮ ನಟ - ಶಾರುಖ್ ಖಾನ್ - ಗೆಲುವು ಅತ್ಯುತ್ತಮ ನಟಿ - ಮಾಧುರಿ ದೀಕ್ಷಿತ್ - ಗೆಲುವು ಅತ್ಯುತ್ತಮ ಪೋಷಕ ನಟ - ಅಕ್ಷಯ್ ಕುಮಾರ್ - ನಾಮನಿರ್ದೇಶಿತ ಅತ್ಯುತ್ತಮ ಪೋಷಕ ನಟಿ - ಕರಿಶ್ಮಾ ಕಪೂರ್ - ಗೆಲುವು ಅತ್ಯುತ್ತಮ ಸಂಗೀತ ನಿರ್ದೇಶಕ - ಉತ್ತಮ್ ಸಿಂಗ್ - ಗೆಲುವು ಅತ್ಯುತ್ತಮ ಗೀತಸಾಹಿತಿ - ಆನಂದ್ ಬಕ್ಷಿ ("ಭೋಲಿ ಸೀ ಸೂರತ್") - ನಾಮನಿರ್ದೇಶಿತ ಅತ್ಯುತ್ತಮ ಹಿನ್ನೆಲೆ ಗಾಯಕ - ಉದಿತ್ ನಾರಾಯಣ್ ("ದಿಲ್ ತೋ ಪಾಗಲ್ ಹೇ) - ನಾಮನಿರ್ದೇಶಿತ ಅತ್ಯುತ್ತಮ ಕಲಾ ನಿರ್ದೇಶನ - ಶರ್ಮಿಷ್ಠ ರಾಯ್ - ಗೆಲುವು ಅತ್ಯುತ್ತಮ ಸಂಭಾಷಣೆ - ಆದಿತ್ಯ ಚೋಪ್ರಾ - ಗೆಲುವು == ಉಲ್ಲೇಖಗಳು == == ಹೊರಗಿನ ಕೊಂಡಿಗಳು == ದಿಲ್ ತೋ ಪಾಗಲ್ ಹೇ @ ಐ ಎಮ್ ಡಿ ಬಿ